ಆಹ್ಲಾದಕರ ಸಾಧಕರು -ಅ.ನಾ.ಪ್ರಹ್ಲಾದರಾಯರು
(ಕೋಲಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
(ಕೋಲಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
ಕೆಲವರಿಗೆ ಪ್ರಶಸ್ತಿಗಳು ಬಂದಾಗ ಅನುಮಾನಗಳ ಹುತ್ತ ಮನದೊಳಗೆ ಸುತ್ತುವರೆಯುತ್ತವೆ ಇನ್ನೂ ಕೆಲವರಿಗೆ ಪ್ರಶಸ್ತಿಗಳು ಬಂದರೆ ಇದುವರೆಗೂ ಇಂಥ ಸಾಧಕರಿಗೆ ಈ ಪ್ರಶಸ್ತಿ ಬಂದಿರಲಿಲ್ಲವೇ ಎಂಬ ಅನುಮಾನ ಹುಟ್ಟಿಬಿಡುತ್ತವೆ.
ಕೋಲಾರದ ಅಬ್ಬಣಿ ನಾರಾಯಣರಾವ್ ಪ್ರಹ್ಲಾದರಾವ್, ಅನಾಪ್ರ,ಪದಬಂಧದ ಪ್ರಹ್ಲಾದರಾಯರ ಸಾಧನೆಗೆ ಗಾಂಭೀರ್ಯವಿದೆ,ಭೂಮಿತೂಕದ ಸಹನೆಯ ಮನೋಧರ್ಮವಿದೆ ,ಆದ್ದರಿಂದಲೇ ೨೬ರ ಜವ್ವನದ ಏರುಬಿಸುಪಿನಲ್ಲಿ ಕೋಲಾರದ ಗೆಳೆಯರ ಜೊತೆಗೂಡಿ ಹೊನ್ನುಡಿ ಪತ್ರಿಕೆ ಶುರು ಮಾಡಿದ ಪ್ರಹ್ಲಾದರಾಯರ ಆ ತುಡಿತ,೧೯೭೫ರಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟಾಗ ಕೇವಲ ೨೨ರ ವಯೋಮಾನದಲ್ಲೇ ಅಕ್ಷರ ಪ್ರಪಂಚದ ಅಕ್ಕರೆಯ ಕರೆಗೆ ತಮ್ಮನ್ನು ಆಗುಮಾಡಿಕೊಂಡ ಕರ್ತೃತ್ವಶಕ್ತಿ,ಕ್ಷಮತೆ ಅಸಾಮಾನ್ಯವಾಗಿ ಕಾಣಿಸುತ್ತದೆ.
ಪದಬಂಧದ ಮಹತ್ಸಾಧಕರು ಅನಾಪ್ರ-ಸೃಜನಶೀಲತೆಯ ಹರಹನ್ನು ಮೈಗೂಡಿಸಿಕೊಂಡು ಅದನ್ನು ಸುದೀರ್ಘ ಕಾಲದ ನಿರಂತರತೆಯನ್ನಾಗಿ ಉಳಿಸಿಕೊಳ್ಳುವ ಕಷ್ಟಕರ ಕೆಲಸವನ್ನು ಇಷ್ಟಪಟ್ಟು ಉಳಿಸಿಕೊಂಡ ಜೀವಸೆಲೆಯ ವ್ಯಕ್ತಿತ್ವ ಅನಾಪ್ರ ಅವರದ್ದು.
ಇದುವರೆಗೂ ಮೂವತ್ತಾರು ಸಾವಿರ(೩೬,೦೦೦) ಪದಬಂಧಗಳ ರಚನೆ,ನಾಲ್ಕು ಲಕ್ಷಕ್ಕೂ ಮೀರಿದ ಅದರ ಸುಳುಹುಗಳು ಭೀಮಸದೃಶ ಸಾಧನೆ ಮಾತ್ರವಲ್ಲ, ಪರ್ವತ ಸಂಯಮದ ಅಚ್ಚಳಿಯದ ಹೆಗ್ಗುರುತು. ಜೊತೆಗೆ ಅವರ ಪದಬಂಧದ ಹಾಸುಬೀಸು ಮತ್ತು ಅದರ ವ್ಯಾಪ್ತಿ ಪ್ರದೇಶ ಏಕಮುಖವಲ್ಲ, ಸಾಮಾಜಿಕ,ಸಾಂಸ್ಕೃತಿಕ, ವಿಶ್ವ..ಸಿನಿಮಾ.. ಹೀಗೆ ಅನೇಕಾನೇಕ ವಿಷಯಗಳ ಅಸೀಮಲೋಕದ ಪದಬಂಧಗಳ ಪ್ರಹ್ಲಾದರಾಯರಿಗೆ ಇಷ್ಟಾದರೂ ಬೀಗುವ ಮನವಲ್ಲದ, ಬಾಗುವ ವಿನೀತ ಗುಣ.
ಜ್ಞಾನದ ಹಂಬಲಕ್ಕೆ ಇಂಬಾಗುವ ಬೌದ್ಧಿಕ ವಿನ್ಯಾಸದ ವಿಕಾಸಕ್ಕೆ ಅರಳಿಕೊಳ್ಳುವ ಈ ಪದಬಂಧಗಳನ್ನು ಸೃಜನಾತ್ಮಕವಾಗಿ ಹರಡಿಸಿದ ಅನಾಪ್ರ ಏಷ್ಯಾದಲ್ಲೇ ಪ್ರಾದೇಶಿಕ ಭಾಷೆಯೊಂದರಲ್ಲಿ ಅತ್ಯಧಿಕ ಪದಬಂಧ ರಚನೆ ಮಾಡಿದ ಲಿಮ್ಕಾದಾಖಲೆಗೆ ಭಾಜನರಾಗಿರುವ ಅಪ್ರತಿಮರು.
ಆದರೆ ಈ ಕ್ಷೇತ್ರದ ಅವರ ಸಾಧನೆಗೆ ಭೇಷ್ ಎನ್ನುತ್ತಲೇ ಪದಬಂಧಗಳನ್ನು ಕುರಿತೇ ೧೦ಕ್ಕೂ ಅಧಿಕ ಕೃತಿಗಳನ್ನು ತಂದಿರುವಅನಾಪ್ರ ಅವರ ಸಾಮರ್ಥ್ಯಕ್ಕೆ ಅಭಿನಂದಿಸಿದರೂ ಇದೊಂದೇ ಅವರ ಕ್ಷೇತ್ರವೆಂದು ಭಾವಿಸಿದರೆ ಅದು ತಪ್ಪಾಗುತ್ತದೆ.
ಅನಾಪ್ರ ಅವರಲ್ಲಿ ಕವಿ ಇದ್ದಾನೆ,ಅದು ವಸಂತಮಲ್ಲಿಕಾ ಎಂಬ ಅವರ ಕವನಸಂಕಲನದಲ್ಲಿ ವೇದ್ಯವಾಗುತ್ತದೆ. ಬಂಗಾರದ ಮನುಷ್ಯ ಕೃತಿ ಡಾ. ರಾಜಕುಮಾರ್ ಅವರ ಹೆಜ್ಜೆಗಳನ್ನು ಕನಸಿನಲೋಕದ ಮೂಲಕ ಅನಾವರಣ ಗೊಳಿಸಿದೆ. ಈ ಕೃತಿಯನ್ನೋದಿ ರಾಜ್ ದಂಪತಿಗಳು ಮನೆಗೇ ಕರೆಸಿ ಆಪ್ತವಾಗಿ ಅನಾಪ್ರ ದಂಪತಿಯನ್ನು ಗೌರವಿಸಿದ್ದರು. ಪಾರ್ವತಮ್ಮ ರಾಜಕುಮಾರ್ ಅವರು ಪತಿಯ ಬಗ್ಗೆ ನುಡಿದ ಮಾತುಗಳು ಅನಾಪ್ರ ಅವರಿಂದ ಪ್ರಾಣಪದಕ ಎಂಬ ಕೃತಿ ರಚಿಸುವಂತೆ ಮಾಡಿದೆ. ಸಾರ್ವಜನಿಕ ಸಂಪರ್ಕಾಧಿಕಾರಿ ಆಗಿದ್ದುಕೊಂಡು ಸರಕಾರಿ ಹುದ್ದೆಯಲ್ಲಿದ್ದ ಅನಾಪ್ರ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀ ಜೈರಾಜ್ ಅವರ ಆಂಗ್ಲ ಕೃತಿಯನ್ನು ಕನ್ನಡಕ್ಕೆ ಜೈತ್ರಯಾತ್ರೆ ಎಂದು ಕನ್ನಡಿಸಿದ್ದಾರೆ.
ಬೆಳ್ಳಿತೆರೆ ಬೆಳಗಿದವರು ಕೃತಿ ೧೧೨ಬೆಳ್ಳಿತೆರೆ ಕಲಾವಿದರ ಸಾಧನೆಗಳಿಂದ ಕಂಗೊಳಿಸುವ ಕೃತಿ. ಕನ್ನಡಿಗ ರಜನೀಕಾಂತ್ ಅವರ ಬದುಕು-ಚಿತ್ರಬದುಕನ್ನು ಕುರಿತ ನನ್ನ ದಾರಿ ವಿಭಿನ್ನ ದಾರಿ..ಅನಾಪ್ರ ಅವರ ಸುಸ್ತಾಗದ ಸೃಷ್ಟೀಶೀಲತೆಯ ಬರಹದ ತವನಿಧಿತ್ವಕ್ಕೆ ಸಾಕ್ಷಿ.
ಪಂತುಲು ಅವರನ್ನು ಕುರಿತು ದಣಿವಿಲ್ಲದ ಧಣಿ ಅನಾಪ್ರ ಅವರ ಮತ್ತೊಂದು ಮಹತ್ವದ ಕೃತಿ. ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಕನ್ನಡ ಚಿತ್ರರಂಗದ ಅಮೃತ ಮಹೋತ್ಸವಕ್ಕಾಗಿ ೨೦೦೯ರಲ್ಲಿ ಬರೆಸಿದ ೭೫ ಹೊತ್ತಗೆ ಗಳಲ್ಲಿ ಡಾ.ರಾಜಕುಮಾರ್, ಟಿ.ಎಸ್.ಕರಿಬಸಯ್ಯ
(ಸ್ಟುಡಿಯೋ ಮಾಲಿಕರು)ಕೃತಿಗಳನ್ನು ಬರೆದ ಅನಾಪ್ರ ಸಹಾ ದಣಿವರಿಯದ ಸಾರ್ಥಕ ಸಾಧಕರು.ಪದಬಂಧು ಇವರ ೬೦ನೇ ವರ್ಷದ ಸಂದರ್ಭದಲ್ಲಿ ಹೊರಬಂದ ಅಭಿನಂದನಾಗ್ರಂಥ.
(ಸ್ಟುಡಿಯೋ ಮಾಲಿಕರು)ಕೃತಿಗಳನ್ನು ಬರೆದ ಅನಾಪ್ರ ಸಹಾ ದಣಿವರಿಯದ ಸಾರ್ಥಕ ಸಾಧಕರು.ಪದಬಂಧು ಇವರ ೬೦ನೇ ವರ್ಷದ ಸಂದರ್ಭದಲ್ಲಿ ಹೊರಬಂದ ಅಭಿನಂದನಾಗ್ರಂಥ.
ಈಗ ತಮ್ಮ ೬೬ನೇ ವಯಸ್ಸಿನಲ್ಲಿ ಮೊಮ್ಮಕ್ಕಳೊಡನೆ ಕಾಲ ಕಳೆಯುತ್ತಿರುವುದೂ ಸುಮಾರು ೧೦೦ದಿನಗಳಾಗುತ್ತಿದೆ ಎಂದರು.ಈ ಶತದಿನೋತ್ಸವವೂ ಬಹಳ ಸಂಪ್ರೀತಿಯ ಘಟ್ಟವೇ ಹೌದು.
ಅನಾಪ್ರ ಅವರ ವಯಸ್ಸು, ಅರಿವು,ಸಾಧನೆ,ಅನುಭವ ಎಲ್ಲದರ ಹಿನ್ನೆಲೆಯಲ್ಲಿ ನೋಡಿದರೂ ಅವರಿಗಿಂತ ನಾನು ಈ ಎಲ್ಲ ಅಂಶಗಳಲ್ಲೂ ಬಹಳ ಬಹಳ ಕಿರಿಯ.ನನ್ನ ಕೃತಿ ಸಿನಿಪಯಣಕ್ಕೆ ಮುನ್ನುಡಿ ಬರೆದದ್ದಾಗಲೀ,ಇಂದಿಗೂ ಅತ್ಯಂತ ಆಪ್ತರಾಗಿರುವ ಅವರ ಮತ್ತು ನನ್ನ ಬಾಂಧವ್ಯ ಅವರ ಸೋದರ ಕೋಲಾರದ ಮಲ್ಲಿಕಾ ಕ್ಯಾಸೆಟ್ಸ್ ನ ಪ್ರಕಾಶರಾಯರ ಗೆಳೆತನಕ್ಕೆ ಧನ್ಯೋಸ್ಮಿ ಎನ್ನಲು ನನಗೆ ಸಹಜಾತಿ ಸಹಜವಾದ ಹೃದ್ಯ ಸಂತೋಷವಿದೆ.
ಪ್ರಶಸ್ತಿಗಳನ್ನು ಪಡೆಯುವ ಹಪಾಹಪಿತನವಿಲ್ಲದಿದ್ದರೂ ಅನಾಪ್ರ ಅವರ ವ್ಯಕ್ತಿತ್ವ ಅವರ ಸಾಧನೆಗೆ ಇಷ್ಟು ವರ್ಷ ಗಳಾದರೂ ಕೋಲಾರದ ಅಬ್ಬಣಿಯ ಪ್ರಹ್ಲಾದರಾಯರನ್ನು ಗುರುತಿಸದಿದ್ದಕ್ಕೆ ನನಗೆ ಬರೀ ಆಶ್ಚರ್ಯವಲ್ಲ,ಬೇಸರಮಿಶ್ರಿತ ಸೋಜಿಗವಾದ ಸಖೇದಾಶ್ಚರ್ಯವಾಗಿತ್ತು.ಆದರೆ ಈಗ ಕೋಲಾರ ಜಿಲ್ಲೆ ಅನಾಪ್ರ ಅವರಿಗೆಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿರುವುದು ಅನಾಪ್ರ ಅವರಿಗೂ, ಕೋಲಾರ ಜಿಲ್ಲೆಗೂ ಸಮಸ್ತ ಕನ್ನಡಿಗರಿಗೂ ಹೆಮ್ಮೆಯ ಸಂಗತಿ.ಇಂಥ ಸಜ್ಜನ,ಸಂಭಾವಿತ ವ್ಯಕ್ತಿತ್ವದ ಅ.ನಾ.ಪ್ರಹ್ಲಾದರಾಯರ ಸಾಂಗತ್ಯ,ಸಖ್ಯ ನನಗೂ ನಿಡುಗಾಲದ ಆಪ್ಯಾಯತೆ ಮತ್ತು ಅನುರಣನಗೊಳ್ಳುತ್ತಲೇ ಇರುವ ಶುದ್ಧ ಮೈತ್ರಿಬಂಧಕ್ಕೆ ನಿದರ್ಶನವಾಗಿದೆ.
ಅನಾಪ್ರ ನಿಮಗೆ,ನಿಮ್ಮ ದೃಢ ಸಂಕಲ್ಪಬಲದ ಸಾಧನೆಗೆ,ಸಂದ ಗೌರವಕ್ಕೆ ನನ್ನ ನಲುಮೆಯ ನಮಸ್ಕಾರ, ಅಭಿನಂದನೆಗಳು.
ಅಲ್ಪಮಾಹಿತಿ
ಶ್ರೀನಿವಾಸ ಪ್ರಸಾದ್ ಡಿ.ಎಸ್.
ಕೋಲಾರ
ಶ್ರೀನಿವಾಸ ಪ್ರಸಾದ್ ಡಿ.ಎಸ್.
ಕೋಲಾರ
No comments:
Post a Comment