ಸ್ಕೂಲ್ಮಾಸ್ಟರ್ ಚಿತ್ರಕ್ಕೆ ಡಿವಿಜಿ ಪ್ರೇರಣೆ
ಅ.ನಾ.ಪ್ರಹ್ಲಾದರಾವ್
ಕನ್ನಡದ ಹಿರಿಯ ಲೇಖಕ ಡಿವಿಜಿಯವರ ಸಲಹೆಯಿಂದಾಗಿ ಕನ್ನಡದಲ್ಲಿ ಒಂದು ಅತ್ಯುತ್ತಮ ಚಲಚಿತ್ರ ವಿಕಸನಗೊಳ್ಳಲು ಕಾರಣವಾಯಿತು. ಅರವತ್ತು ವರ್ಷಗಳ ಹಿಂದೆ ಬಿಡುಗಡೆಗೊಂಡ ಕನ್ನಡದ ಮಹೋನ್ನತ ಚಲನಚಿತ್ರ ಸ್ಕೂಲ್ಮಾಸ್ಟರ್ ರೂಪುಗೊಂಡಿದ್ದರ ಹಿಂದೆ ಒಂದು ಸ್ವಾರಸ್ಯ ಕಥೆಯಿದೆ. 1934ರಲ್ಲಿ ಕನ್ನಡದ ಮೊದಲ ಚಿತ್ರ `ಸತಿ ಸುಲೋಚನ` ಬಿಡುಗಡೆಯಾದ ನೆನಪಿನಲ್ಲಿ 1958ರಲ್ಲಿ ಕನ್ನಡ ಚಿತ್ರರಂಗದ ರಜತ ಮಹೋತ್ಸವ ಬೆಂಗಳೂರಿನಲ್ಲಿ ನಡೆಯಿತು. 25 ವರ್ಷಗಳ ಅಂತರದಲ್ಲಿ ಕನ್ನಡದಲ್ಲಿ ಕೇವಲ 90 ಚಿತ್ರಗಳು ತಯಾರಾಗಿದ್ದವು.. ಬೆಂಗಳೂರಿನ ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಚಲನಚಿತ್ರ ಕ್ಷೇತ್ರದ ಬಹುಪಾಲು ಗಣ್ಯರು ಪಾಲ್ಗೊಂಡಿದ್ದರು. ಕನ್ನಡದ ಪ್ರಖ್ಯಾತ ಲೇಖಕರಾದ ಡಿ.ವಿ.ಗುಂಡಪ್ಪನವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ``ಕನ್ನಡ ಚಿತ್ರರಂಗದ ಈ ಬೆಳ್ಳಿಹಬ್ಬ ಅರ್ಥಪೂರ್ಣವಾಗಬೇಕಾದರೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಬಲ್ಲಂತಹ ಅತ್ಯುತ್ತಮ ಕನ್ನಡ ಚಿತ್ರವೊಂದನ್ನು ರೂಪಿಸಲು ಕನ್ನಡ ಚಲನಚಿತ್ರ ನಿರ್ಮಾಪಕರು ಮುಂದಾಗಬೇಕು, ಕೇವಲ ಕಾರ್ಯಕ್ರಮದ ಆಚರಣೆಯಿಂದ ರಜತ ಮಹೋತ್ಸವ ಸಾರ್ಥಕ್ಯವನ್ನು ಪಡೆಯಲಾರದು`` ಎಂದು ಈ ಸಂದರ್ಭದಲ್ಲಿ ಡಿವಿಜಿ ಹೇಳಿದರು. ಮಾತನ್ನು ಮುಂದುವರೆಸಿದ ಡಿವಿಜಿಯವರು ``ನಿರ್ಮಾತೃ ಪಂತಲು ಇಲ್ಲಿದ್ದಾರೆ, ಅವರು ಈ ಬಗ್ಗೆ ಯೋಚಿಸಲಿ`` ಎಂದರು.
ಅ.ನಾ.ಪ್ರಹ್ಲಾದರಾವ್
ಕನ್ನಡದ ಹಿರಿಯ ಲೇಖಕ ಡಿವಿಜಿಯವರ ಸಲಹೆಯಿಂದಾಗಿ ಕನ್ನಡದಲ್ಲಿ ಒಂದು ಅತ್ಯುತ್ತಮ ಚಲಚಿತ್ರ ವಿಕಸನಗೊಳ್ಳಲು ಕಾರಣವಾಯಿತು. ಅರವತ್ತು ವರ್ಷಗಳ ಹಿಂದೆ ಬಿಡುಗಡೆಗೊಂಡ ಕನ್ನಡದ ಮಹೋನ್ನತ ಚಲನಚಿತ್ರ ಸ್ಕೂಲ್ಮಾಸ್ಟರ್ ರೂಪುಗೊಂಡಿದ್ದರ ಹಿಂದೆ ಒಂದು ಸ್ವಾರಸ್ಯ ಕಥೆಯಿದೆ. 1934ರಲ್ಲಿ ಕನ್ನಡದ ಮೊದಲ ಚಿತ್ರ `ಸತಿ ಸುಲೋಚನ` ಬಿಡುಗಡೆಯಾದ ನೆನಪಿನಲ್ಲಿ 1958ರಲ್ಲಿ ಕನ್ನಡ ಚಿತ್ರರಂಗದ ರಜತ ಮಹೋತ್ಸವ ಬೆಂಗಳೂರಿನಲ್ಲಿ ನಡೆಯಿತು. 25 ವರ್ಷಗಳ ಅಂತರದಲ್ಲಿ ಕನ್ನಡದಲ್ಲಿ ಕೇವಲ 90 ಚಿತ್ರಗಳು ತಯಾರಾಗಿದ್ದವು.. ಬೆಂಗಳೂರಿನ ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಚಲನಚಿತ್ರ ಕ್ಷೇತ್ರದ ಬಹುಪಾಲು ಗಣ್ಯರು ಪಾಲ್ಗೊಂಡಿದ್ದರು. ಕನ್ನಡದ ಪ್ರಖ್ಯಾತ ಲೇಖಕರಾದ ಡಿ.ವಿ.ಗುಂಡಪ್ಪನವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ``ಕನ್ನಡ ಚಿತ್ರರಂಗದ ಈ ಬೆಳ್ಳಿಹಬ್ಬ ಅರ್ಥಪೂರ್ಣವಾಗಬೇಕಾದರೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಬಲ್ಲಂತಹ ಅತ್ಯುತ್ತಮ ಕನ್ನಡ ಚಿತ್ರವೊಂದನ್ನು ರೂಪಿಸಲು ಕನ್ನಡ ಚಲನಚಿತ್ರ ನಿರ್ಮಾಪಕರು ಮುಂದಾಗಬೇಕು, ಕೇವಲ ಕಾರ್ಯಕ್ರಮದ ಆಚರಣೆಯಿಂದ ರಜತ ಮಹೋತ್ಸವ ಸಾರ್ಥಕ್ಯವನ್ನು ಪಡೆಯಲಾರದು`` ಎಂದು ಈ ಸಂದರ್ಭದಲ್ಲಿ ಡಿವಿಜಿ ಹೇಳಿದರು. ಮಾತನ್ನು ಮುಂದುವರೆಸಿದ ಡಿವಿಜಿಯವರು ``ನಿರ್ಮಾತೃ ಪಂತಲು ಇಲ್ಲಿದ್ದಾರೆ, ಅವರು ಈ ಬಗ್ಗೆ ಯೋಚಿಸಲಿ`` ಎಂದರು.
ಡಿವಿಜಿಯವರ ಈ ಕರೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬಿ.ಆರ್.ಪಂತುಲು ಅವರಲ್ಲಿ ಸಂಚಲನ ಮೂಡಿಸಿತು. `ಹೌದು, ಕನ್ನಡದಲ್ಲಿ ಅಂತಹ ಚಿತ್ರ ಏಕೆ ಮಾಡಬಾರದು` ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಂಡರು. ಈ ಯೋಚನೆ ಪಂತಲು ಅವರ ತಲೆ ಹೊಕ್ಕ ನಂತರ ಕೂತಲ್ಲಿ, ನಿಂತಲ್ಲಿ ಅದೇ ವಿಷಯ ಕಾಡಲಾರಂಭಿಸಿತು. ಯಾವ ಕಥೆ, ಯಾವ ಚಿತ್ರ, ಹೇಗಿರಬೇಕು ಎಂಬ ನೂರಾರು ಆಲೋಚನೆಗಳು ಅವರಲ್ಲಿ ಸುಳಿದು ಹೋದವು. ಹತ್ತಾರು ಕಥೆಗಳು ಅವರ ಮನಃಪಟಲದಲ್ಲಿ ಹಾದು ಹೋದವು. ಶಿಕ್ಷಕರಾಗಿಯೇ ತಮ್ಮ ವೃತ್ತಿ ಜೀವನ ಆರಂಭಿಸಿ, ಆ ಮೂಲಕವೇ ಪಂತುಲು ಎಂಬ ಅಭಿದಾನಕ್ಕೆ ಪಾತ್ರವಾಗಿದ್ದ ಅವರ ಮನದಲ್ಲಿ ಶಿಕ್ಷಕ ಪಾತ್ರಗಳೇ ಹೆಚ್ಚು ಕಾಡÀಲಾರಂಭಿಸಿತು. ಉತ್ತಮ ಶಿಕ್ಷಕನೊಬ್ಬನ ಬದುಕನ್ನು ಆಧರಿಸಿದ ಕಥೆಯೇ ತಮ್ಮ ಚಲನಚಿತ್ರವಾಗಬೇಕೆಂದು ಅವರ ಮನಸ್ಸು ಹೇಳಿತು. ಒಂದು ಮಹಾನ್ ಚಿತ್ರವನ್ನು ರಜತಪರದೆಗೆ ತರುವ ನಿಶ್ಚಯ ಬೆಂಗಳೂರಿನಲ್ಲಿ ನಡೆದ ಕನ್ನಡ ಚಲನಚಿತ್ರರಂಗದ ರಜತ ಮಹೋತ್ಸವ ಸಂದರ್ಭದಲ್ಲಿ ಪಂತುಲು ಅವರಲ್ಲಿ ಆವಿರ್ಭವಿಸಿತು. ಹಾಗೇ ಮೂಡಿ ಬಂದ `ಸ್ಕೂಲ್ಮಾಸ್ಟರ್` ಚಿತ್ರ ಕನ್ನಡಿಗರ ಹೃನ್ಮನಗಳನ್ನು ತುಂಬಿಕೊಂಡಿತಲ್ಲದೆ ಭಾರತದ ಹಲವಾರು ಭಾಷೆಗಳಲ್ಲಿ ಈ ಚಿತ್ರ ತಯಾರಾಗಿ ಬಿಡುಗಡೆಗೊಂಡು, ಪ್ರೇಕ್ಷಕರ ಕಣ್ಣುಗಳನ್ನು ತೇವ ಮಾಡಿತು.
ಪಂತುಲು ಕಲಾ ಕ್ಷೇತ್ರಕ್ಕೆ ತಮ್ಮ ಇಡೀ ಜೀವನವನ್ನು ಧಾರೆಯೆರೆದುಕೊಂಡಿದ್ದರು. ಭಾರತೀಯ ಭಾಷೆಗಳ ಉತ್ತಮ ಕಥೆಗಳನ್ನು ತರಿಸುವುದು, ಅವುಗಳನ್ನು ಓದುವುದು ಅಥವ ಓದಿಸಿ ಕೇಳುವುದು ಅವರ ಅಭ್ಯಾಸವಾಗಿತ್ತು. ಶಿಕ್ಷಕನೊಬ್ಬನ ಕಥೆ ಬೇಕೆಂದು ಅವರು ತವಕಿಸಿದಾಗ ಅಂತಹ ಒಂದು ಕಥೆ ಅವರಿಗೆ ಲಭ್ಯವಾಯಿತು. ಮರಾಠಿ ಭಾಷೆಯಲ್ಲಿ ಶಿರವಾಡ್ಕರ್ ಅವರು ಬರೆದಿದ್ದ `ವೈಷ್ಣವಿ` ಕಥೆ ಬಹುಪಾಲು ಪಂತುಲು ಅವರ ಮನಸ್ಸಿನಲ್ಲಿನ ಲೆಕ್ಕಾಚಾರಗಳನ್ನು ಪರಿಹರಿಸುವಂತಹ ಕಥೆಯಾಗಿತ್ತು. ಕುಸುಮಾಗ್ರಾಜ್ ಎಂಬ ಕಾವ್ಯನಾಮದಿಂದ ಪ್ರಖ್ಯಾತರಾಗಿದ್ದ ಖ್ಯಾತ ಮರಾಠಿ ಲೇಖಕ ಶಿರವಾಡ್ಕರ್ ಬರೆದ ಮೊದಲ ಕಾದಂಬರಿ `ವೈಷ್ಣವಿ` ಆಗಿತ್ತು. ತಮ್ಮ ಕಾವ್ಯ, ನಾಟಕ, ಕಥೆ, ಕಾದಂಬರಿ ಹಾಗೂ ಚಿಂತನೆಗಳಿಂದ ಶಿರವಾಡ್ಕರ್ ಹೆಸರು ಮಹಾರಾಷ್ಟ್ರದಲ್ಲಿ ಇಂದಿಗೂ ಅಮರವಾಗಿ ಉಳಿದಿದೆ. ಡಿ.ವಿ.ಜಿಯವರ ಆಶಯದಂತೆ ಪಂತುಲು ಅವರು `ಸ್ಕೂಲ್ ಮಾಸ್ಟರ್` ಚಿತ್ರವನ್ನು ಸಿದ್ಧಪಡಿಸಿ, ಕನ್ನಡ ಚಿತ್ರರಂಗದ ರಜತ ವರ್ಷದಲ್ಲೇ ಬಿಡುಗಡೆ ಮಾಡಿದ್ದು ಒಂದು ವಿಶೇಷವಾಯಿತು.
ಪಂತುಲು ಅವರಲ್ಲಿ ಅಡಗಿದ್ದ ಕಲಾ ಪ್ರತಿಭೆ `ಸ್ಕೂಲ್ ಮಾಸ್ಟರ್` ಮೂಲಕ ಅನಾವರಣಗೊಂಡಿತು. ಅಭಿನಯ ಹಾಗೂ ನಿರ್ದೇಶನ ಈ ಎರಡೂ ಕ್ಷೇತ್ರಗಳಲ್ಲಿ ಅವರಿಗಿದ್ದ ಪ್ರೌಢಿಮೆ ಈ ಚಿತ್ರದಲ್ಲಿ ಅಭಿವ್ಯಕ್ತಿಗೊಂಡಿತು. ಬಹಳ ಮುಖ್ಯವಾಗಿ ಅತಿಥಿ ನಟನಾಗಿ ಅಭಿನಯಿಸಿದರೂ ಜನಮಾನಸದಲ್ಲಿ ತನ್ನ ವ್ಯಕ್ತಿತ್ವವನ್ನು ಹಿಡಿದಿರಿಸಿದ ಸಬ್ ಇನ್ಸಪೆಕ್ಟರ್ ಪಾತ್ರದಲ್ಲಿ ತಮಿಳು ನಟ ಶಿವಾಜಿ ಗಣೇಶನ್ ಜನ ಮನ ಗೆದ್ದರು. ಈ ಚಿತ್ರ ಬೆಂಗಳೂರಿನಲ್ಲಿ ಸಂಯೋಜಿತವಾಗಿ 56 ವಾರಗಳು ಪ್ರದರ್ಶನಗೊಂಡು, ಒಂದು ವರ್ಷ ಸತತವಾಗಿ ಪ್ರದರ್ಶನಗೊಂಡ ಪ್ರಥಮ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಚಿತ್ರದ ರಜತಮಹೋತ್ಸವ ಸಮಾರಂಭವನ್ನು ಬೆಂಗಳೂರಿನ ಮೆಜಿಸ್ಟಿಕ್ ಪ್ರದೇಶದಲ್ಲಿದ್ದ ಗೀತಾ ಚಿತ್ರಮಂದಿರದಲ್ಲಿ ಏರ್ಪಡಿಸಲಾಗಿತ್ತು. ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಎಸ್.ನಿಜಲಿಂಗಪ್ಪನವರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಪುಟದಲ್ಲಿ ಪ್ರಮುಖ ಖಾತೆ ವಹಿಸಿಕೊಂಡಿದ್ದ ಬಿ.ಡಿ.ಜತ್ತಿ ಅವರು ಪಂತುಲು ಅವರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು. ಕೇಂದ್ರ ಸರ್ಕಾರ 1958ರ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ `ಸ್ಕೂಲ್ಮಾಸ್ಟರ್` ಚಿತ್ರವನ್ನು ಅಖಿಲ ಭಾರತ ಮಟ್ಟದಲ್ಲಿ ಮೂರನೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂದು ಪರಿಗಣಿಸಿ ರಾಷ್ಟ್ರಪತಿಗಳ ಬೆಳ್ಳಿಪದಕ ಹಾಗೂ ಪ್ರಶಸ್ತಿಪತ್ರ ನೀಡಿ ಗೌರವಿಸಿತು. 1958ರ ಏಪ್ರಿಲ್ 28ರಂದು ನವದೆಹಲಿಯ ವಿಜ್ಞಾನಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಂತುಲು ಭಾಗವಹಿಸಿ ಬಹಳ ವಿನೀತ ಭಾವದಿಂದ ಭಾರತದ ಪ್ರಥಮ ರಾಷ್ಟ್ರಪತಿಗಳಾಗಿದ್ದ ಬಾಬು ರಾಜೇಂದ್ರಪ್ರಸಾದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಈ ಅಪೂರ್ವ ಸಮಾರಂಭದಲ್ಲಿ ನಿಂತು ಪ್ರಶಸ್ತಿ ನೀಡುತ್ತಿದ್ದ ರಾಷ್ಟ್ರಪತಿಗಳ ಪಕ್ಕದಲ್ಲಿ ಭಾರತದ ಪ್ರಥಮ ಪ್ರಧಾನಮಂತ್ರಿಗಳಾಗಿದ್ದ ಪಂಡಿತ್ ಜವಹರಲಾಲ್ ನೆಹರು ಆಸೀನರಾಗಿದ್ದರು. ಪಂತುಲು ಪ್ರಶಸ್ತಿ ಪಡೆಯುವಾಗ ಅವರ ಸೌಜನ್ಯವನ್ನು ಕಂಡ ನೆಹರು ಕುಳಿತ ಕಡೆಯಿಂದಲೇ ಎರಡೂ ಕೈ ಮುಗಿದು ತಮ್ಮ ಕೃತಜ್ಞತೆಗಳನ್ನು ಅರ್ಪಿಸಿದರು.
`ಸ್ಕೂಲ್ಮಾಸ್ಟರ್` ಚಿತ್ರ ಬಿಡುಗಡೆ ಆಗುವ ವೇಳೆಗಾಗಲೇ ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯಾಗಿ ಪ್ರಖ್ಯಾತವಾಗಿದ್ದ ಸೊಸಲೆ ಅಯ್ಯಾಶಾಸ್ತ್ರಿಗಳು ರಚಿಸಿದ `ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೆ` ಗೀತೆಯನ್ನು ಪಂತುಲು ತಮ್ಮ ಸ್ಕೂಲ್ಮಾಸ್ಟರ್ ಚಿತ್ರದಲ್ಲಿ ಶಾಲಾ ಪ್ರಾರ್ಥನಾ ಗೀತೆಯನ್ನಾಗಿಯೇ ಬಳಸಿಕೊಂಡರು. ಹತ್ತೊಂಬತ್ತನೆ ಶತಮಾನದ ಆರಂಭದಿಂದ ಹಲವಾರು ದಶಕಗಳ ಕಾಲ ಮೈಸೂರು ರಾಜ್ಯದ ಬಹುಪಾಲು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಪ್ರಾರ್ಥನಾಗೀತೆಯಾಗಿದ್ದ `ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೆ` ಗೀತೆಯನ್ನು ಸೋಸಲೆ ಅಯ್ಯಾಶಾಸ್ತ್ರಿಗಳು (20.03.1854-17.05.1934) ರಚಿಸಿದರು. ಅಂದಿನ ದಿನಗಳಲ್ಲಿ ಮಗ್ಗಿಪುಸ್ತಕ ಎಂಬ ಹೆಸರಿನಲ್ಲಿ ಪ್ರಕಟಗೊಳ್ಳುತ್ತಿದ್ದ ಮಕ್ಕಳ ಉಪಯುಕ್ತ ಗಣಕ ಕೋಷ್ಠಕದಲ್ಲಿಯೂ ಪ್ರಾರ್ಥನಾಗೀತೆ ಎಂಬ ಹೆಸರಿನಲ್ಲಿಯೇ ಸ್ವಾಮಿದೇವನೆ ಹಾಡನ್ನು ಪ್ರಕಟಿಸಲಾಗುತ್ತಿತ್ತು. ತಿರಮಕೂಡಲು ನರಸೀಪುರದ ಬಳಿ ಇರುವ ಸೋಸಲೆಯಲ್ಲಿ ಜನಿಸಿದ ಅಯ್ಯಾಶಾಸ್ತ್ರಿಗಳು ಮೈಸೂರಿನ ಸದ್ವಿದ್ಯಾಶಾಲೆಯಲ್ಲಿ ಉಪಾಧ್ಯಾಯ ವೃತ್ತಿ ಮಾಡಿದರು. ಜಗನ್ಮೋಹನ ಮುದ್ರಾಕ್ಷರ ಶಾಲೆಯಲ್ಲಿ ಸಂಸ್ಕøತ ಗ್ರಂಥ ಪರಿಶೋಧನ ಕಾರ್ಯವನ್ನೂ ಮಾಡಿದರು. ಮೈಸೂರು ಅರಮನೆಯಲ್ಲಿ ರಾಜಗುರುಗಳ ಪಟ್ಟ ಇವರಿಗೆ ದೊರೆತಿತ್ತು. ಮೈಸೂರಿನಲ್ಲಿ ವೃತ್ತಿ ರಂಗಭೂಮಿ ತಂಡ ಕಟ್ಟಿ ಅದನ್ನು ಮುನ್ನಡೆಸಿದರು. ಹಲವಾರು ಗ್ರಂಥಗಳನ್ನು ರಚಿಸಿ ಪ್ರಕಟಪಡಿಸಿದರು. ಮಹಾರಾಜರಿಂದ ಮಹಾವಿದ್ವಾನ್, ಕವಿತಿಲಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅಯ್ಯಾಶಾಸ್ತ್ರಿಗಳ ಪುತ್ರ ಎಸ್.ಜಿ.ಸ್ವಾಮಿ (ನಿಧನ: 22 ಸೆಪ್ಟೆಂಬರ್ 1955) ಈಗ ಪ್ರಖ್ಯಾತಗೊಂಡಿರುವ ಮೈಸೂರು ಗಂಧದ ಸಾಬೂನು ಆವಿಷ್ಕರಿಸಿ ಹಲವು ವರ್ಷಗಳ ಕಾಲ ಸಾಬೂನು ಕಾರ್ಖಾನೆಯನ್ನು ನಡೆಸಿದರು. ಬೆಂಗಳೂರಿನ ಲಾಲ್ಬಾಗ್ ಬಳಿಯಿದ್ದ ಎಸ್.ಜಿ.ಸ್ವಾಮಿ ಅವರ ನಿವಾಸ ಡಿವಿಜಿ, ಮಾಸ್ತಿ ಮುಂತಾದ ಸಾಹಿತಿಗಳು ಆಗಾಗ ಸೇರುತ್ತಿದ್ದ ಸಾಹಿತ್ಯ ಕೇಂದ್ರವಾಗಿ ಪರಿಣಮಿಸಿತ್ತು. `ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೆ` ಹಾಡನ್ನು ಉಲ್ಲೇಖಿಸಿ ಬಹಳಷ್ಟು ಕಡೆ ಕಣಗಾಲ್ ಪ್ರಭಾಕರ ಶಾಸ್ತ್ರಿಗಳಿಂದ ರಚಿತವಾಗಿದೆ ಎಂದು ದಾಖಲಿಸಿರುವುದು ಸರಿಯಲ್ಲ. ಸೋಸಲೆ ಅಯ್ಯಾಶಾಸ್ತ್ರಿಗಳು ರಚಿಸಿದ ಸ್ವಾಮಿ ದೇವನೆ ಲೋಕಪಾಲನೆ ಪ್ರಾರ್ಥನಾ ಗೀತೆ ತಲಾ ನಾಲ್ಕು ಸಾಲುಗಳ ಎಂಟು ಚರಣಗಳನ್ನು ಹೊಂದಿದೆ.
No comments:
Post a Comment