ವಿಜಯೇಂದ್ರ ನಿನಗೆ ಅಂತಿಮ ನಮನ
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಮಾಗೊಂದಿ ವಿಜಯೇಂದ್ರ ಜನ್ಮಸ್ಥಳ. ನನ್ನ ಸಂಬಂಧಿಯೂ ಅದ ವಿಜಯೇಂದ್ರ 1972ರಲ್ಲಿ ನಾನು ಕಾಲೇಜು ವ್ಯಾಸಂಗ ಮಾಡುತ್ತಿದ್ದ ದಿನಗಳಿಂದ ಪರಿಚಯ. 1975ರಲ್ಲಿ ನಾನು ಕೋಲಾರಪತ್ರಿಕೆ ವರದಿಗಾರನಾಗಿ ಸೇರಿದಾಗ, ಆಗಿಂದಾಗ್ಗೆ ಬರುತ್ತಿದ್ದ. ಕೋಲಾರದಲ್ಲಿಯೇ ಪಿಯೂಸಿ ವ್ಯಾಸಂಗವನ್ನು ಮಾಡುತ್ತಿದ್ದ. ಪ್ರಗತಿಪರರ ಗುಂಪಿನಲ್ಲಿ ಕಾಣಿಸಿಕೊಂಡಿದ್ದ ವಿಜಯೇಂದ್ರ ಆ ವೇಳೆಗೆ ಅವಿನ್ಯುರಸ್ತೆಯ ಅರಳಿಮರದ ಕೆಳಗೆ ಒಂದು ಟೈಪರೇಟರ್ ಇರಿಸಿಕೊಂಡು ಜಾಬ್ ಟೈಪಿಂಗ್ ಮಾಡುತ್ತಿದ್ದ. 1979ರಲ್ಲಿ ನಾನು ಕೋಲಾರದಲ್ಲಿ ಹೊನ್ನುಡಿ ಪತ್ರಿಕೆ ಆರಂಭಿಸುವ ವೇಳೆಗೆ ಮದುವೆ ಮಾಡಿಕೊಂಡು ಒಬ್ಬ ಮಗನ ತಂದೆಯಾಗಿದ್ದ. ಹೊನ್ನುಡಿ ಕಚೇರಿ ಮುಂಭಾದಲ್ಲಿಯೇ ಅವರ ಅಕ್ಕ ಶ್ರೀಮತಿ ಜಯಮ್ಮನವರ ಮನೆ (ಅವರ ಭಾವ ಹೊಟೆಲ್ ಒಂದನ್ನು ಇರಿಸಿಕೊಂಡಿದ್ದರು). ಕೋಲಾರಕ್ಕೆ ಆಗಿಂದಾಗ್ಗೆ ಅಕ್ಕನ ಮನೆಗೆ ಬರುತ್ತಿದ್ದ ವಿಜಯೇಂದ್ರ ಹೊನ್ನುಡಿ ಆಫೀಸಿಗೆ ಬಂದು ಕೂಡುತ್ತಿದ್ದ. ಒಂದು ದಿನ ಪ್ರಗತಿಪರ ಧೋರಣೆಯನ್ನು ಹೊಂದಿದ್ದ ಮಾಸಪತ್ರಿಕೆಯೊಂದನ್ನು (ಹೆಸರು ಮರೆತಿದೆ) ಆರಂಭಿಸುವ ತನ್ನ ಬಯಕೆಯನ್ನು ಹೇಳಿದ. ನಾವು ಕೋಲಾರದ ಗೆಳೆಯರು ಸೇರಿ ಬಹಳಷ್ಟು ಜನರ ವಾರ್ಷಿಕ ಚಂದಾ ಸಂಗ್ರಹಿಸಿಕೊಟ್ಟಿದ್ದೆವು. ಪತ್ರಿಕೆ ಆರಂಭಿಸಿ ಒಂದಷ್ಟು ತಿಂಗಳು ಪತ್ರಿಕೆ ಕಳುಹಿಸುತ್ತಿದ್ದ. ಬಹಳ ಜಾಣ ಹಾಗೂ ಬುದ್ಧಿವಂತನಾದ ವಿಜಯೇಂದ್ರ ಡೆಕ್ಕನ್ ಕ್ರಾನಿಕಲ್ ಇಂಗ್ಲಿಷ್ ದಿನಪತ್ರಿಕೆಯ ಮುಖ್ಯ ವರದಿಗಾರನಾದ. ನಾನು ಆಗ ವಾರ್ತಾ ಇಲಾಖೆ ಸೇರಿಕೊಂಡಿದ್ದೆ. ಕುಟುಂಬದ ಹತ್ತಾರು ಮದುವೆ ಸಮಾರಂಭಗಳಲ್ಲಿ ಸಿಗುತ್ತಿದ್ದ. ಮೊದಮೊದಲು ಇಂತಹ ಕೌಟುಂಬಿಕ ಕಾರ್ಯಕ್ರಮಗಳಿಗೆ ಅವರ ಶ್ರೀಮತಿ ಮೀರಾ ಮಾತ್ರ ಬರುತ್ತಿದ್ದರು. ಕ್ರಮೇಣ ಗಂಡ ಹೆಡತಿ ಬರಲಾರಂಭಿಸಿದ್ದರು. ಕಳೆದ 2019ರಲ್ಲಿ ನನ್ನ ಚಿಕ್ಕಮ್ಮನ ಮಗ ಅವನ ಮಗನ ಉಪನಯನ ಮಾಡಿದ್ದ. ಅಲ್ಲಿಗೆ ಗಂಡ ಹೆಂಡತಿ ಇಬ್ಬರೂ ಬಂದಿದ್ದರು. ನಾವು ಬಹಳ ಸಮಯ ಹಳೆಯ ಸಂಗತಿಗಳನ್ನು ಮೆಲುಕು ಹಾಕಿದ್ದೆವು. 20 ದಿನಗಳ ಹಿಂದೆ ಕೆ.ಜೈರಾಜ್ ಅವರ ರಾಜಮಾರ್ಗ ಕೃತಿ ಬೇಕು ಅಂತ ಸಂದೇಶ ಕಳುಹಿಸಿದ್ದ. ಕೂಡಲೇ ನನ್ನ ಇನ್ನೂ 3-4 ಪುಸ್ತಕಗಳೊಂದಿಗೆ ಅಂಚೆ ಪಾರ್ಸಲ್ ಕಳುಹಿಸಿದೆ. ಎಂತಹ ಓದುಗ ಎಂದರೆ ಪುಸ್ತಕಗಳು ತಲುಪಿದ ಮರು ದಿನವೇ ರಾಜಮಾರ್ಗದಲ್ಲಿ ಕೆಲವು ಪುಟಗಳು ಕಾಣೆಯಾಗಿವೆ ಎಂದು ಮೆಸೇಜ್ ಹಾಕಿದ. ಸರಿಪಡಿಸುತ್ತೇನೆ ಎಂದು ಮರು ಮೆಸೇಜ್ ಕಳುಹಿಸಿದೆ. ಬೇರೆ ಪುಸ್ತಕ ಕಳುಹಿಸಲು ಸಾಧ್ಯವಾಗಲೇ ಇಲ್ಲ. ವಿಜಯೇಂದ್ರನ ಅಣ್ಣ ಗೋಪಾಲರಾವ್ ನನಗೆ ಬಹಳ ಆತ್ಮೀಯರು. ಪದಬಂಧ ಪ್ರೇಮಿ. ವಿಜಯೇಂದ್ರ ಬಹಳ ಬೇಗ ನಮ್ಮನ್ನು ಅಗಲಿದ. ಅವನ ಆತ್ಮಕ್ಕೆ ಶಾಂತಿ ದೊರೆಯಲಿ. ಶ್ರೀಮತಿ ಮೀರಾ, ಕುಟುಂಬ ಈ ದುಖಃ ತಡೆದುಕೊಳ್ಳುವಂತಾಗಲಿ.
ನನ್ನ ಅಂತಿಮ ನಮನಗಳು ವಿಜಯೇಂದ್ರ
ನನ್ನ ಅಂತಿಮ ನಮನಗಳು ವಿಜಯೇಂದ್ರ
No comments:
Post a Comment